ಶ್ರೀ ಪಿ.ಕೆ. ಸುಬ್ರಹ್ಮಣ್ಯಸ್ವಾಮಿಯವರು ಕೊಳ್ಳೇಗಾಲದಲ್ಲಿ ಅರ್ಚಕರ ಮನೆತನದಲ್ಲಿ ಜನಿಸಿದವರು. ಇವರ ತಂದೆ ವೇ.ಬ್ರ.ಶ್ರೀ ಪೂಲಾ ಕುವರಾರಸ್ವಾಮಿಯವರು, ತಾಯಿ ಶ್ರೀಮತಿ ಪೂಲಾ ಮಾದಮ್ಮನವರು. ಶ್ರೀಯುತರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. (ಮೆಕ್ಯಾನಿಕಲ್) ಪದವಿ ಪಡೆದರು. ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.), ಬೆಂಗಳೂರು ಇಲ್ಲಿಂದ ಎಂ.ಎಸ್. (ಇಂಜಿನಿಯರಿಂಗ್) ಪದವಿಗಳಿಸಿದರು.
ಎನ್.ಜಿ.ಇ.ಎಫ್. ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ವಹಣೆ ಮಾಡಿದರು. ಕಾರ್ಮಿಕರಿಗೆ, ಮೇಲ್ವಿಚಾರಕರಿಗೆ, ನಿರ್ವಾಹಕರಿಗೆ ನೂರಾರು ತರಬೇತಿ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಿದರು. ಸ್ವಾಮಿ ಚಿನ್ಮಯಾನಂದರಿಂದ ಪ್ರಭಾವಿತರಾಗಿ ಹತ್ತು ವರ್ಷಗಳ ಕಾಲ ಚಿನ್ಮಯ ಯುವಕೇಂದ್ರದ ಯುವಕರಿಗೆ ತರಬೇತಿ ನೀಡಿದರು.
ಪ್ರಸ್ತುತ ಶ್ರೀ ಶಂಕರವಿದ್ಯಾಲಯ, ಕೋಲಾರ ಇಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. “ಶ್ರೀರುದ್ರಾಧ್ಯಾಯ”, “ಶಿಷ್ಟಾಚಾರಗಳು” ಮತ್ತು “108 ಶಿವಚಿಂತನೆಗಳು”, “ಶ್ರೀ ಶಿವಪಂಚಾಕ್ಷರಿ ವಿದ್ಯಾ” ಪುಸ್ತಕಗಳನ್ನು ಹೊರತಂದಿದ್ದಾರೆ.
ನನಗೆ ಬಹಳ ವರ್ಷಗಳಿಂದ ನಮ್ಮ ದೇವಾಲಯದ ಬಗ್ಗೆ ಪುಸ್ತಕವೊಂದನ್ನು ಹೊರತರಬೇಕೆಂಬ ಹಂಬಲ ಬಹಳವಾಗಿತ್ತು. ದೈವಭಕ್ತರು, ಜ್ಞಾನವೃದ್ಧರು ಹಾಗೂ ಸಂಚಿಕೆಯ (ಪುಸ್ತಕದ) ಸ್ವರೂಪದ ಬಗ್ಗೆ ಅರಿವಿರುವ ಭಕ್ತರೊಬ್ಬರನ್ನು ಹುಡುಕಾಡುತ್ತಲೇ ಇದ್ದೆ. ಒಂದು ದಿನ ಆಕಸ್ಮಿಕವಾಗಿ ಸಿಕ್ಕ ಸುಬ್ರಹ್ಮಣ್ಯಸ್ವಾಮಿಯವರ ಮುಂದೆ ನನ್ನ ಆಸೆಯನ್ನು ಮುಂದಿಟ್ಟೆ. ಅವರು ಇದು ದೇವರ ಸೇವೆ ಎಂಬ ಭಾವದಿಂದ ಕೂಡಲೇ ಸಂತೋಷದಿಂದ ಒಪ್ಪಿಕೊಂಡರು.
ಆಗ ನನಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ಬಹಳ ಶ್ರದ್ಧೆಯಿಂದ ಶ್ರಮ ವಹಿಸಿ “ಶ್ರೀ ಸುಬ್ರಹ್ಮಣ್ಯಸ್ವಾಮಿ ಭಕ್ತಿ ಕುಸುಮ” ಸಂಚಿಕೆಯನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ನಾನು ನಮ್ಮ ದೇವಸ್ಥಾನದ ಟ್ರಸ್ಟ್ನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.